Posted by: pavankir | ಜೂನ್ 2, 2011
ಭಕ್ತಿಯ ದೀಪವ ಬೆಳಗುತ್ತಾ…..
ಆಡಂಬರದ ಪೂಜೆಗಳು ಬೇಕಿಲ್ಲ, ಅತಿಶಯದ ಮಡಿವಂತಿಕೆಯ ನಿರೀಕ್ಷೆಯಿಲ್ಲ, ಬೇಕಾಗಿರುವುದು ಕೇವಲ ಭಕ್ತಿ ಮಾತ್ರ. ಈ ಭಕ್ತಿ ಬ್ರಹ್ಮಾಂಡೋದರನ ಹಸಿವನ್ನು ಕುಡುತೆಯೊಂದರ ಹಾಲಿನಲ್ಲಿ ನೀಗಿಸುತ್ತದೆ, ಅದೇ ಕುಡುತೆಯ ಹಾಲಿನ ಬಿಂಧುವೊಂದರಿಂದ ಹಾಲಿನ ಹೊಳೆ ಹರಿಸುತ್ತದೆ. ಭಕ್ತಿಯ ದೀಪ ಹೊತ್ತಿಸಿದರೆ ಅದರಿಂದ ಹೊರ ಹೊಮ್ಮುವ ಕಾಂತಿ ಪ್ರೀತಿ, ತ್ಯಾಗ, ಪ್ರೇಮ, ದಯೆ, ಕರುಣೆಗಳೆಂಬ ಹೆಸರಿನಿಂದ ಗುರ್ತಿಸಿಕೊಳ್ಳುತ್ತದೆ. ನಾವು ನೀವುಗಳೆಲ್ಲ ಈ ಭಕ್ತಿ ಲಹರಿಯಲ್ಲಿ ತೇಲಾಡಲು ಭಕ್ತಿಯ ದೀಪವನ್ನು ಬೆಳಗೋಣವೇ?
Posted by: pavankir | ಮೇ 25, 2011
ಮತ್ತೆ ನಿಮ್ಮೊಂದಿಗೆ..ನಿಮ್ಮವನೇ ಆದ ನಾನು
ತೋಚಿದ್ದ ಗೀಚಿ ರಿಂಗಣಿಸುತ್ತಿದ್ದ ಸ್ವರ ರಿಂಗಣ ಸ್ತಬ್ದವಾಗಿತ್ತು. ಕಾರಣಗಳು ನೂರೆಂಟು ಆದರೂ ಅವೆಲ್ಲ ನೆಪ ಮಾತ್ರ. ಮತ್ತೆ ಮನದ ತುಡಿತ ನೀಗಲು ಬರೆಯಲಾರಂಭಿಸಿದ್ದೇನೆ. ಸ್ವೀಕರಿಸಿ ಆಶೀರ್ವದಿಸಿ
Posted in ಜೀವನ ಕಲೆ
Posted by: pavankir | ಮೇ 25, 2011
ಬೆಂಕಿ ಪೊಟ್ಟಣದ ಕಡ್ಡಿಗಳು….
ಇಂದು ಯಾಕೋ ಏನೋ ದೇವರಿಗೆ ದೀಪ ಹಚ್ಚುವಾಗ ಒಂದಷ್ಟು ವಿಚಾರಗಳ ಸಾಲು ಹೊಳೆಯಿತು. ನಿಮ್ಮೊಂದಿಗೆ ಹಂಚಿಕೊಳ್ಳುವ ಇರಾದಯೇ ಈ ಲೇಖನ. ನಾವೆಲ್ಲರೂ ನೋಡುವ ಬೆಂಕಿ ಪೊಟ್ಟಣ ಮತ್ತು ಅದರ ಕಡ್ಡಿಗಳು; ಅದನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಎಂತಹ ವಿಚಾರಗಳು ತಲೆದೋರುತ್ತದೆ. ನಿರ್ದಿಷ್ಟವಾದ ಕಡ್ಡಿಗಳ ಲೆಕ್ಕ ಇಲ್ಲದೇ ಇದ್ದರೂ ಅವುಗಳ ಆಕಾರ ನಮಗೆ ಗ್ರಹ್ಯ. ಕೆಲವು ಸ್ವಲ್ಪ ದೊಡ್ಡದು, ಮತ್ತೆ ಕೆಲವು ತೀರಾ ತೆಳು, ಕೆಲವಕ್ಕೆ ತಲೆ ದೊಡ್ಡ, ಮತ್ತೆ ಕೆಲವಕ್ಕೆ ತುದಿ ಮೊದಲಿಲ್ಲ, ಹೀಗೆಯೇ ಏನೆನೋ ಆಕಾರಗಳು.
ನಾವು ಬೆಂಕಿ ಪೊಟ್ಟಣದಿಂದ ಯಾವುದಾದರೂ ಒಂದು ಕಡ್ಡಿಯನ್ನು ಹೊರ ತೆಗೆದು ಉರಿಸುತ್ತೇವೆ. ಯಾವ ಕಡ್ಡಿಯನ್ನು ಹೊರ ತೆಗೆಯಬೇಕೆಂಬ ನಿರ್ಣಯವಿರುವುದಿಲ್ಲ, ಹಾಗೆಯೇ ಎಷ್ಟು ಕಡ್ಡಿಗಳನ್ನು ಹೊರ ತೆಗೆಯಬೇಕೆಂಬ ನಿರ್ಣಯವೂ ಇರುವುದಿಲ್ಲ. ನಾವು ಬೆಂಕಿ ಕಡ್ಡಿಗಳನ್ನು ಬೇರೆ ಬೇರೆ ಕಾರಣಗಳಿಗೆ ಉಪಯೋಗಿಸುತ್ತೇವೆ. ದೇವರಿಗೆ ಮಂಗಳ ನೀರಾಜನ ಬೆಳಗಲು, ಉದರಾಗ್ನಿ ಶಮನಕ್ಕೆ ಅಡುಗೆ ಮಾಡಲು, ಬೆಳಕಿಗಾಗಿ ದೀಪ ಉರಿಸಲು, ಅಷ್ಟೇ ಯಾಕೆ ಬೀಡಿ ಹಚ್ಚಲು, ಹೀಗೆ ಹತ್ತು ಹಲವಾರು. ಎಲ್ಲ ಕಡ್ಡಿಗಳು ಉರಿದು ಬಸ್ಮವಾಗಲೇ ಬೇಕಾದರೂ, ಯಾವುದು ಯವಾಗ ಎಂಬ ಪ್ರಶ್ನೆಗೆ ಉತ್ತರ ನಮ್ಮಲ್ಲಿಲ್ಲ. ಕಡ್ಡಿಗಳನ್ನು ತಯಾರಿಸುವಲ್ಲಿನ ಉದ್ದೇಶ ಒಳ್ಳೆಯದೇ ಆದರೂ, ಕೆಲವು ಕಡ್ಡಿಗಳು ಇನ್ನೊಬ್ಬರ ಮನೆ ಸುಡಬಹುದು, ಮತ್ತೆ ಕೆಲವು ಕೆಲವರ ಹೆಣ ಸುಡಬಹುದು.
ಬೆಂಕಿ ಕಡ್ಡಿಗಳನ್ನು ನಮ್ಮ ಬದುಕೆಂದು ತಿಳಿದು, ಬೆಂಕಿ ಪೊಟ್ಟಣವನ್ನು ನಮ್ಮ ಕುಟುಂಬವೆಂದು ತಿಳಿದರೆ ಅರೆ ಕ್ಷಣ ಸೋಜಿಗವಾಗುತ್ತದೆ. ಯಾವ ಕಡ್ಡಿ ಯಾವ ಪೊಟ್ಟಣ ಸೇರುತ್ತದೋ ತಿಳಿಯದು. ಕೆಲವರು ಒಳ್ಳೆಯ ಕಾರಣಕ್ಕಾಗಿ ಬಳಕೆಯಾಗುತ್ತೇವೆ. ಮತ್ತೆ ಕೆಲವರು ವಿನಾ ಕಾರಣ ಜೀವನ ಮುಗಿಸುತ್ತೇವೆ. ಎಂದಿಗೆ ನಮ್ಮ ಜೀವನ ಮುಗಿಯುತ್ತದೋ ತಿಳಿದಿರುವುದಿಲ್ಲ. ಒಂದೊಂದು ದಿನ ತಪ್ಪಿದಾಗಲು ನಾವು ಅಮರರೆಂಬ ಭಾವ ಮೊಳೆಯುತ್ತಿರುತ್ತದೆ. ಎಂದಿಗಾದರು ಈ ಕಾಯ ಎರವಿನ ಒಡವೆ ಎಂಬ ಸತ್ಯ ಅರ್ಥ ಆಗುವುದೇ ಇಲ್ಲ. ಪೊಟ್ಟಣದೊಳಗಿನ ಬದುಕೇ ಸರ್ವಸ್ವ ಅದೇ ಪ್ರಪಂಚವೆಂಬ ಭಾವ ಜೀವ ನದಿಯಲ್ಲಿ ಅಡಗಿರುತ್ತದೆ. ಒಳ್ಳೆಯ ಕಾರಣಕ್ಕಾಗಿ ಒಳ್ಳೆಯವರ ಕೈಗೆ ನಮ್ಮ ಕಡ್ಡಿ ಸಿಗುವಂತಾಗಲಿ ಎಂಬ ಪ್ರಾರ್ಥನೆಯೂ ನಮ್ಮ ಮನದಲ್ಲಿ ಮೂಡುವುದಿಲ್ಲ.
ಈ ಕಿರು ಲೇಖನದ ವಿಚಾರ ಧಾರೆಯ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ..
Posted in ಜೀವನ ಕಲೆ
ನೋಡಿದವರ ನುಡಿಗಳು…